ಸಿರಾ ಅಭಿವೃದ್ಧಿಗಾಗಿ ಮತ ನೀಡಿ: ಟಿ.ಬಿ.ಜಯಚಂದ್ರ

ತುಮಕೂರು: ಸಿರಾ ವಿಧಾನಸಭಾ ಕ್ಷೇತ್ರದ ಮತದಾರರು ಪ್ರಬುದ್ದರು. ಬಿಜೆಪಿಯ ಯಾವುದೇ ಹಣ, ಆಮಿಷಗಳಿಗೆ ಒಳಗಾಗದೆ ಅಭಿವೃದ್ಧಿಯ ಪರ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ತಮಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾರೂಢ ಬಿಜೆಪಿಗೆ ಅಧಿಕಾರ ಬಲ, ಹಣ ಬಲ ಇದೆ. ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದರೂ ಸಿರಾ ತಾಲ್ಲೂಕಿನ ಜನರ ಪ್ರಬುದ್ಧರಾಗಿದ್ದು, ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ ತಮ್ಮ ನಿರ್ಧಾರವನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಾರೆ ಎಂದರು. ಸಿರಾದಲ್ಲಿ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದಲೂರು ಕೆರೆ ಇದೆ ಎಂಬುದೇ ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲ. ಈ ಹಿಂದೆ ಇದೇ ಬಿಜೆಪಿ ನಾಯಕರು ಮದಲೂರು ಕೆರೆಗೆ ನೀರು ಹರಿಸಲು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ತೆರಳಿ ಮದಲೂರು ಕೆರೆಗೆ ನೀರು ಹರಿಸದಂತೆ ತಡೆಯೊಡ್ಡಿದರು ಎಂದು ದೂರಿದರು. 

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಮದಲೂರು ಕೆರೆಗೆ 15 ದಿನದಲ್ಲಿ ಹೇಮಾವತಿ ನೀರು ಹರಿಸಿದ್ದೆ. ತದ ನಂತರ ನಡೆದ ಚುನಾವಣೆಯಲ್ಲಿ ನಾನು ಸೋತಿದ್ದರಿಂದ ನೀರು ಬರಲೇ ಇಲ್ಲ. ರಾಜಕೀಯ ಇಚ್ಛಾಶಕ್ತಿ ಇಲ್ಲದಿದ್ದರೆ ನೀರು ತರಲು ಸಾಧ್ಯವಿಲ್ಲ ಎಂಬುದಕ್ಕೆ ಸಿರಾ ಸಾಕ್ಷಿಯಾಗಿದೆ ಎಂದರು. ನಾನು ಚುನಾವಣೆಯಲ್ಲಿ ಸೋಲಲಿ ಅಥವಾ ಗೆಲ್ಲಲಿ ನಿರಂತರವಾಗಿ ಕ್ಷೇತ್ರದ ಜನರೊಂದಿಗಿದ್ದು  ಅಭಿವೃದ್ಧಿ      Áರ್ಯಗಳಿಗೆ ಸಾಥ್ ನೀಡುತ್ತೇನೆ. ಈ ಕ್ಷೇತ್ರದ ಜನರಿಗೂ ಗೊತ್ತಿದೆ ಜಯಚಂದ್ರ ಗೆದ್ದರೆ ನೀರು ಬರುತ್ತದೆ, ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ ಎಂಬುದು. ನಾನು 10 ವರ್ಷದ ಹಿಂದೆಯೇ ಸಿರಾ ಒಂದು ಸಂಗಮವಾಗುತ್ತದೆ ಎಂದು ಹೇಳಿದ್ದೆ. ಆ ಮಾತು ಈಗ ನಿಜ ಎಂಬುದು ಕ್ಷೇತ್ರದ ಜನರ ಅರಿವಿಗೆ ಬರುತ್ತಿದೆ ಎಂದು ಅವರು ಹೇಳಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಕಾನೂನು ಸಚಿವನಾಗಿದ್ದ ಸಂದರ್ಭದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಸಿರಾಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅತಿ ಹೆಚ್ಚಿನ ಸಹಾಯ ಮಾಡಿದ್ದರು. 5 ವರ್ಷದಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರೂ. ಹಣವನ್ನು ಮೂಲಭೂತ ಸೌಕರ್ಯ ಒದಗಿಸುವ ಕೆಲಸಕ್ಕೆ ನೀಡಿದ್ದರು. ಆದರೆ ಕಾಮಗಾರಿಗಳು ವಿವಿಧ ಹಂತದಲ್ಲಿದ್ದವು. ಇನ್ನೂ ಪರಿಪೂರ್ಣವಾಗಿರಲಿಲ್ಲ. ಅಷ್ಟೊತ್ತಿಗೆ ಎದುರಾದ ವಿಧಾನಸಭಾ ಚುನಾವಣೆಯಲ್ಲಿ ನಿಂತು ನಾನು ಸೋತೆ. ಆದರೆ ಕಾಮಗಾರಿಗಳು ಮತ್ತು ಮೂಲಭೂತ ಸೌಕರ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣಲಿಲ್ಲ. ಈ ಕಾರಣದಿಂದ ಕ್ಷೇತ್ರದ ಜನ ಬೇಸತ್ತಿದ್ದಾರೆ. ಅಂದಿನಿಂದ ಅಭಿವೃದ್ಧಿ ಕುಂಠಿತವಾಯಿತು, ಸಿರಾ ಅಭಿವೃದ್ಧಿ ವೇಗ ಹಿಂದಕ್ಕೆ ಹೋಯಿತು ಎಂಬ ಭಾವನೆ ಜನರಲ್ಲಿ ಮೂಡಿದೆ. ಅಭಿವೃದ್ಧಿಗೆ ಒತ್ತು ಕೊಡಬೇಕು, ಬೆಂಬಲ ಕೊಡಬೇಕು ಎಂಬ ಏಕೈಕ ಉದ್ದೇಶದಿಂದ ಜನತೆ ಮತ್ತೆ ಕಾಂಗ್ರೆಸ್ ಬೆಂಬಲಿಸಲು ಮನಸ್ಸು ಮಾಡಿದ್ದಾರೆ ಎಂದು ಅವರು ಪುನರುಚ್ಚರಿಸಿದರು.   ಸಿರಾ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಪಕ್ಷ ವಿಧಾನಸೌಧದ ಮೂರನೇ ಮೆಟ್ಟಿಲು ಹತ್ತಲು ಎಲ್ಲ ರೀತಿಯ ಶುಭ ಸೂಚನೆಯನ್ನು ಈ ಉಪಚುನಾವಣೆ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.