ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಾರಂಭ | ತಿದ್ದುಪಡಿಗೆ ನ.9ರವರೆಗೆ ಅವಕಾಶ | Vishwa kannadi

ತುಮಕೂರು: ಶಿಕ್ಷಣ ಇಲಾಖೆಯು 2020-21ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈಗಾಗಲೇ ಇಇಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ ಮಾಹಿತಿಗಳನ್ನು ಇಂದೀಕರಿಸಲಾಗಿದೆ.  ಈ ತಂತ್ರಾಂಶದಲ್ಲಿ ನಮೂದಾಗಿರುವ ಶಿಕ್ಷಕರ ಮಾಹಿತಿಯಲ್ಲಿ ತಿದ್ದುಪಡಿ ಇದ್ದಲ್ಲಿ ಸಂಬಂಧಿಸಿದ ಶಿಕ್ಷಕರು ನವೆಂಬರ್ 9ರೊಳಗಾಗಿ ಲಿಖಿತವಾಗಿ ದಾಖಲೆ ಸಮೇತ ಕ್ಷೇತ್ರ ಶಿಕ್ಷಣಾಧಿಕಾರಿ/ ಪ್ರೌಢಶಾಲಾ ಮುಖ್ಯ  ಶಿಕ್ಷಕರಿಗೆ ಮನವಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ.

ಶಿಕ್ಷಕರು ಶಿಕ್ಷಕ ಮಿತ್ರ ಆಪ್ ಡೌನ್‍ಲೋಡ್ ಮಾಡಿಕೊಂಡು ತಂತ್ರಾಂಶದಲ್ಲಿ ನಮೂದಿಸಲಾಗಿರುವ ಶಿಕ್ಷಕರ ಹೆಸರು, ಜನ್ಮ ದಿನಾಂಕ, ನೇಮಕಾತಿಯಾದ ಹುದ್ದೆ, ನೇಮಕಾತಿಯಾದ  ದಿನಾಂಕ, ಪ್ರಸ್ತುತ ಪದನಾಮ, ಪ್ರಸ್ತುತ ಶಾಲೆಯ ಹೆಸರು ವಿಳಾಸ ಮತ್ತು ಕರ್ತವ್ಯಕ್ಕೆ ಹಾಜರಾದ ದಿನಾಂಕ, ಸೇವೆ ಸಲ್ಲಿಸಿರುವ ಎಲ್ಲಾ ಶಾಲೆಗಳ/ ಕಛೇರಿ ವಿಳಾಸ ಬಯಸಿರುವ ಆದ್ಯತೆ ಇತ್ಯಾದಿ ಮಾಹಿತಿಗಳನ್ನು ಕೂಲಕುಂಶವಾಗಿ ಪರಿಶೀಲಿಸಿಕೊಳ್ಳಬೇಕು. ಮಾಹಿತಿ ತಪ್ಪಿದಲ್ಲಿ ನ.9ರೊಳಗಾಗಿ ಸರಿಪಡಿಸಿಕೊಳ್ಳತಕ್ಕದ್ದು.

ವರ್ಗಾವಣೆಗಾಗಿ ಆದ್ಯತೆ ಬಯಸುವವರು ನೇಮಕಾತಿ ಪ್ರಾಧಿಕಾರಿಗಳಿಂದ ಸೇವಾ ದೃಢೀಕರಣ ಪತ್ರ ಹಾಗೂ ವೈದ್ಯಕೀಯ ಮಂಡಳಿಗಳ ಪ್ರಮಾಣ ಪತ್ರವನ್ನು  ಪಡೆದುಕೊಳ್ಳಬೇಕು.  ಇದು ಶಿಕ್ಷಕರ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ.  ವರ್ಗಾವಣೆ ಸಂದರ್ಭದಲ್ಲಿ ಯಾವುದಾದರೂ ಗೊಂದಲಗಳುಂಟಾದಲ್ಲಿ ಸಂಬಂಧಿಸಿದ ಶಿಕ್ಷಕರೇ ನೇರ ಹೊಣೆಗಾರರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ತಿಳಿಸಿದ್ದಾರೆ.