ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೃಹತ್ ಪ್ರತಿಭಟನೆ ಮಾಡಲು ಸಜ್ಜಾಗಿದ್ದು, ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ನಗರದ ಬಾಳನಕಟ್ಟೆಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರವರೆಗೆ ಹಾಸನದ ಅರಸೀಕೆರೆಯಿಂದ ವಿಧಾನ ಸೌಧದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 4 ರಂದು ವಿಧಾನಸೌಧಕ್ಕೆ ಅಪಾರ ರೈತರೊಂದಿಗೆ ಮುತ್ತಿಗೆಗೆ ತಯಾರಿ ನಡೆಸಲಾಗಿದೆ ಎಂದರು. ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಕಾಯ್ದೆ ವಾಪಸ್, ಕೃಷಿ ಕಾರ್ಯಕ್ಕೆ ಸಮರ್ಪಕ ವಿದ್ಯುತ್, ವಿದ್ಯುತ್ ಖಾಸಗೀಕರಣ, ತಮಿಳುನಾಡಿಗೆ ನೀರು ಬಿಟ್ಟಿರೋದನ್ನು ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ 2016 ರ ಬರ ಪರಿಸ್ಥಿತಿ ಉದ್ಭವ ಈಗಲೂ ಆಗಿದೆ ಕೊಬ್ಬರಿ ಬೆಲೆ ಕನಿಷ್ಟ 8 ಸಾವಿರಕ್ಕೆ ಕುಸಿದಿದೆ ಎಂದರು. ಗೌರಿ ಗಣೇಶ ಹಬ್ಬಕ್ಕೂ ಮಾರುಕಟ್ಟೆ ಚೇತರಿಸಿಕೊಳ್ಳುವ ಲಕ್ಷಣ ಇಲ್ಲ ಕೊಬ್ಬರಿ ಬೆಂಬಲ ಬೆಲೆಗಾಗಿ ತಾಲೂಕುಗಳನ್ನು ಬಂದ್ ಮಾಡಲಾಗಿತ್ತು, ಬಂದ್ ಮಾಡಿ ಪ್ರಯೋಜನ ಇಲ್ಲ. ಸರ್ಕಾರ ಗ್ಯಾರಂಟಿಗೆ ಜೋತು ಬಿದ್ದಿದ್ದಾರೆ ರೈತರು ಬದುಕಿದ್ದಾರೋ ಸತ್ತಿದ್ದಾರೋ ಎಂದು ಸರ್ಕಾರ ನೋಡುತ್ತಿಲ್ಲ, ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಇದ್ದಾಗ ಕೃಷಿ ಕಾಯಿದೆ ವಾಪಸ್ ಗಾಗಿ ಹೋರಾಟ ಮಾಡಿದ್ರು, ಈಗ ಅವರು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಯ್ತು ಕೃಷಿ ಕಾಯಿದೆ ವಾಪಸ್ ತೆಗೆದಿಲ್ಲ, ಕಾವೇರಿ ನೀರು ಬಿಟ್ಟು ಸರ್ಕಾರ ಬಹಳ ತಪ್ಪು ಮಾಡಿದೆ.ರಾಜ್ಯದಲ್ಲಿ ಬರಗಾಲ ಇದ್ದರೂ ತಮಿಳುನಾಡಿಗೆ ನೀರು ಬಿಟ್ಟಿದ್ದು 70% ಭಾಗ ಮಳೆಯ ಸಮಸ್ಯೆ ಇದ್ರೂ ಸಿಎಂ ಯಾಕೆ ನೀರು ಬಿಟ್ಟರು, ಬಂಗಾರಪ್ಪ ಸಿಎಂ ಆಗಿದ್ದಾಗ ನೀರು ಬಿಟ್ಟಿರಲಿಲ್ಲ ಹಾಗಂತ ಅವರಿಗೆ ಯಾರೂ ಏನೂ ಮಾಡಿಲ್ಲ.ಸಿದ್ದರಾಮಯ್ಯರಿಗೆ ಅಧಿಕಾರದ ಮೇಲೆ ಇದ್ದ ಮೋಹ ರಾಜ್ಯದ ಜನತೆ ಬಗ್ಗೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.ಪರಮೇಶ್ವರ್ ಅವರಿಗೆ ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ, ಕೊಬ್ಬರಿಗೆ ಸರ್ಕಾರ 11500 ಬೆಲೆ ಕೊಟ್ಟಿತ್ತು 13000 ಸಾವಿರ ಕೊಡುತ್ತಿದ್ದೇವೆ ಎಂದು ಗೃಹ ಸಚಿವರು ಹೇಳುತ್ತಿದ್ದಾರಂತೆ.ಜಿ.ಪರಮೇಶ್ವರ್ ಗೆ ಕಾಮನ್ ಸೆನ್ಸ್ ಇದೆಯೋ ಇಲ್ವೋ ಗೊತ್ತಿಲ್ಲ, 13 ಸಾವಿರ ರೂ ಕೊಬ್ಬರಿಗೆ ಕೊಟ್ಟಿದ್ದೇ ಹೌದಾದರೆ ಪರಮೇಶ್ವರ್ ಅವರ ಮನೆ ಮುಂದೆ ಕೊಬ್ಬರಿ ಸುರಿಬೇಕಾ ಎಂದರು.ಸರ್ಕಾರಕ್ಕೆ ಕನಿಷ್ಠ ಕಾಲಾವಕಾಶ ಕೊಟ್ಟಿದ್ದೇವೆ ಇನ್ನುಮುಂದೆ ಚಾಟಿ ಬೀಸುತ್ತೇವೆ ಕೃಷಿ ಕಾಯಿದೆ ವಾಪಸ್ ಪಡೆಯಲು 4-5 ಸಾವಿರ ಕೋಟಿ ರೂ ಒಟ್ಟು ಮಾಡಬೇಕಂತಿಲ್ಲ ಕೇವಲ ನಿರ್ಧಾರದಿಂದ ವಾಪಸ್ ತೆಗೆದುಕೊಳ್ಳಬಹುದು,ಸಿದ್ದರಾಮಯ್ಯ ನಾಟಕೀಯವಾಗಿ ನಡೆದುಕೊಳ್ಳುತಿದ್ದಾರೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳುತಿಲ್ಲ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿ ಅದರ ಲಾಭ ರೈತರಿಗೆ ಸರಿಯಾಗಿ ತಲುಪಿಸುತ್ತಿಲ್ಲ ದರ ಹೆಚ್ಚಳದಿಂದ ಬಂದ ಲಾಭದಲ್ಲಿ ಹಾಲಿನ ಡೈರಿಗಳ ನಷ್ಟ ಭರಿಸಿಕೊಳ್ಳುತ್ತಿದೆ ಡೈರಿಯವರು ವಿದೇಶ ಪ್ರವಾಸಕ್ಕೆ ಹೋಗಿ ದುಂದುವೆಚ್ಚ ಮಾಡುತಿದ್ದಾರೆ ಎಂದು ಸರ್ಕಾರದ ವಿರುದ್ದ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.ಇದೇ ವೇಳೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಾಟೀಲ್ ಮಾತನಾಡಿ,ಕೊಬ್ಬರಿ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ರೈತರ ಕಷ್ಟದ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಮಿತಿ ಹಾಗೂ ಹಸಿರು ಸೇನೆ ವತಿಯಿಂದ ಸೆಪ್ಟೆಂಬರ್ 26ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ,ಈ ಪಾದಯಾತ್ರೆಯಲ್ಲಿ ಹೆಚ್ಚಿನ ರೈತರು ಭಾಗವಹಿಸುವ ಮೂಲಕ ಪಾದಯಾತ್ರೆ ಯಶಸ್ಸಿಗೆ ಸಹಕರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರು,ಪದಾಧಿಕಾರಿಗಳು,ತಿಪಟೂರು ಜೆಡಿಎಸ್ ಮುಖಂಡ ಶಾಂತಕುಮಾರ್ ಸೇರಿದಂತೆ ಇತರರು ಹಾಜರಿದ್ದರು.