ಶಿರಾ: ಶಿರಾ ಮತ್ತು ಆರ್.ಆರ್.ನಗರ ಕ್ಷೇತ್ರಗಳಲ್ಲಿ ಎರಡು ಪಕ್ಷಕ್ಕೂ ಸೋಲು ಕಟ್ಟಿ ಬುತ್ತಿಯಾಗಿದೆ. ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಸ್ವಯಂ ಬೆಂಬಲಿಸುತ್ತಿದ್ದು, ಇದರ ಪರಿಣಾಮ ರಾಜಕೀಯ ದೃವೀಕರಣ ಪ್ರಾರಂಭವಾಗಿದೆ. ಬಿಜೆಪಿ ಶಾಶ್ವತ ಕೋಟೆ ಕಟ್ಟುತ್ತಾರೆ ಎಂಬ ಭಯದಿಂದ ಕಾಂಗ್ರೆಸ್ ಪಕ್ಷ ಹತಾಶ ಸ್ಥಿತಿ ತಲುಪಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಅವರು ನಗರದ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ. ಉಪಚುನಾವಣೆಯಲ್ಲಿ ಈ ಬಾರಿ ಕಮಲ ಅರಳುವುದು ಶತಸಿದ್ದ. ಇದಕ್ಕಾಗಿ ಪಕ್ಷದ ಮುಖಡರು, ಕಾರ್ಯಕರ್ತರು ಸಂಘಟಿತವಾಗಿ ಚುನಾವಣೆ ನಡೆಸುತ್ತಿದ್ದಾರೆ. ರಾಜ್ಯ ಮಟ್ಟದ ಹಾಗೂ ಸ್ಥಳೀಯ ಮಟ್ಟದ ಮುಖಂಡರು ಬೂತ್ಮಟ್ಟದ ಸಮಿತಿ ಮಾಡಿ ಪಕ್ಷ ಸಂಘಟಿಸಿದ್ದಾರೆ. ಇಡೀ ರಾಜ್ಯವೇ ಅಚ್ಚರಿಪಡುವಂತ ಫಲಿತಾಂಶ ಹೊರಹೊಮ್ಮಲಿದೆ. ಪಕ್ಷದ ಆಂತರಿಕ ವರದಿ, ಕೇಂದ್ರ ಮತ್ತು ರಾಜ್ಯದ ಪೊಲೀಸ್ ಇಲಾಖೆ ವರದಿಯು ಸಹ ಬಿಜೆಪಿ ಖಾತೆ ತೆರೆಯುವುದು ಖಚಿತ ಎಂಬ ಮಾಹಿತಿ ಬಂದಿದ್ದು, ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರು ರಾಜಕಾರಣಿಯಾಗದೆ ಹಲವಾರು ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತೊಡಗಿದವರು. ಜನರ ಸೇವೆ ಮಾಡಿದವರು. ಈಗ ರಾಜಕಾರಣದ ಮೂಲಕ ಜನಸೇವೆ ಮಾಡಲು ಮುಂದೆ ಬಂದಿದ್ದು, ಶಿರಾ ಕ್ಷೇತ್ರದ ಜನತೆ ಅವರನ್ನು ಆರ್ಶೀವದಲಿಸಲಿದ್ದಾರೆ ಎಂದರು. ಕಾಂಗ್ರೆಸ್ನವರಿಗೆ ಜೆಡಿಎಸ್ ಗೆಲ್ಲುವುದು ಇಷ್ಟವಿಲ್ಲ. ಜೆಡಿಎಸ್ನವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಬಾರದು ಎಂದು ಹೇಳಿದ್ದಾರೆ. ಇದರ ಪರಿಣಾಮ ಬಿಜೆಪಿ ಗೆಲುವು ಶತಸಿದ್ದ ಎಂದರು.

ಕಾಡುಗೊಲ್ಲ ಸಮುದಾಯ ಎಸ್.ಟಿ.ಗೆ ಸೇರಿಸುವ ಹೋರಾಟ ಬಹಳ ದಿನಗಳಿಂದ ಇದೆ. ಈಗ ನಮ್ಮ ಸರಕಾರ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ತೆರೆದು, ಅಭಿವೃದ್ದಿ ನಿಗಮದ ಮೂಲಕ ಸಮುದಾಯಕ್ಕೆ ನ್ಯಾಯ ಕೊಡಲಿಕ್ಕೆ ಹೊರಟಿದ್ದೇವೆ. ಎಲ್ಲೂ ಕೂಡ ಅಭಿವೃದ್ದಿ ವಿಷಯದಲ್ಲಿ ಬಿಜೆಪಿ ಜಾತಿ ತಂದಿಲ್ಲ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಿಂದ 6000 ಹಣ ಹಾಕಿದ್ದೇವೆ. ಜನಧನ್ ಖಾತೆಗೆ 1000 ಹಣ ಹಾಕಿದ್ದೇವೆ. ಯಾವುದೇ ಜಾತಿ ಕೇಳಿಲ್ಲ. 8 ತಿಂಗಳ ಕಾಲ ಉಚಿತ ರೇಷನ್ ಕೊಟ್ಟಿದ್ದೇವೆ. ಯಾವ ಜಾತಿ ಎಂದು ಕೇಳಿಲ್ಲ. ಹಾಲಿಗೆ ಸಬ್ಸೀಡಿ ಕೊಟ್ಟಿದ್ದೇವೆ, ಭೇಟಿ ಬಚಾವೋ, ಭೇಟಿ ಪಡಾವೂ ಇವ್ಯಾವಕ್ಕೂ ನಾವು ಜಾತಿ ಕೇಳಿಲ್ಲ. ನಮ್ಮ ಉದ್ದೇಶ ಎಲ್ಲರ ಅಭಿವೃದ್ದಿ ಮಾತ್ರ. ಕೊಟ್ಟ ಮಾತಿನಂತೆ ನಡೆಯುತ್ತೇವೆ: ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ಚುನಾವಣೆ ಘೋಷಣೆಯಾಗುವ ಮುಂಚೆಯೇ ಮಾತು ಕೊಟ್ಟಿದ್ದೇವೆ ಅದರಂತೆ ನಡೆಸುತ್ತೇವೆ. ಕೆರೆ ತುಂಬಿಸುವುದರಲ್ಲಿ ಮೀನಮೇಷ ಎಣಿಸುವುದಿಲ್ಲ. ಆದ್ಯತೆ ಮೇಲೆ ಕೆಲಸ ಮಾಡುತ್ತೇವೆ. ಯಡಿಯೂರಪ್ಪನವರು ಕೊಟ್ಟ ಮಾತನ್ನು ನಡೆಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಬೇದಬಾವ ಮಾಡುವುದಿಲ್ಲ. ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ಸರಕಾರದ ಮಟ್ಟದಲ್ಲಿ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದರು. ಶಿರಾ ಕ್ಷೇತ್ರದ ಮತದಾರರಿಗೆ ಬಿಜೆಪಿಗೆ ಮತ ಹಾಕಿ ಅಭ್ಯಾಸ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಲೀಡ್ ಕೊಟ್ಟಿದ್ದಾರೆ. ಇಲ್ಲಿ ಜನರು ಬಿಜೆಪಿ ಪರವಾಗಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಬೂತ್ ಸಮಿತಿ ಮಾಡಿದ್ದಾರೆ. ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಸಿ.ಮಾಲಿಮರಿಯಪ್ಪ, ಶಿರಾ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಮದನ್ ಭಾರಧ್ವಜ್, ಕೃಷ್ಣಮೂರ್ತಿ, ನಿರಂಜನ್, ಹನುಮಂತನಾಯ್ಕ ಸೇರಿದಂತೆ ಹಲವರು ಹಾಜರಿದ್ದರು.