ತುರುವೇಕೆರೆ: ಬಿ.ಜೆ.ಪಿ.ಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಜೆ.ಡಿ.ಎಸ್.ನ ದೌರ್ಬಲ್ಯಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಆಗ್ನೇಯ ಪದವೀಧರ ಕೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮೇಶ್ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಬುಧವಾರ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, 28 ಸಾವಿರ ಮತದಾರರಿರುವ ದೊಡ್ಡ ಕ್ಷೇತ್ರ ತುಮಕೂರು ಜಿಲ್ಲೆಯಾಗಿದ್ದು ಅದರಲ್ಲಿ ತುರುವೇಕೆರೆಯಲ್ಲಿ ಸು.1600 ಮತದಾರರಿದ್ದಾರೆ. ನಾನು 2017ರಲ್ಲಿ ಇದೇ ಕ್ಷೇತ್ರದಲ್ಲಿ ಗೆದ್ದಾಗ ಕೆಲಸ ಮಾಡಲು ನನಗೆ ಕೇವಲ 6 ತಿಂಗಳ ಅಧಿಕಾರ ಮಾತ್ರ ಸಿಕ್ಕಿತ್ತು ಆದ್ದರಿಂದ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಮತ್ತೊಮ್ಮೆ ತಮ್ಮ ಆಶೀರ್ವಾದ ಬೇಕಿದೆ. ಪ್ರವಾಸದ ವೇಳೆ ನನ್ನ ಗೆಲುವಿಗೆ ಪೂರಕವಾದ ವಾತಾವರಣ ಕಂಡುಬರುತ್ತಿದ್ದು ನನ್ನ ಗೆಲುವು ಖಚಿತ ಎಂದರು. ಚುನಾವಣಾ ಕ್ಷೇತ್ರ ಬಹು ವಿಸ್ತಾರವಾದ್ದರಿಂದ ಹಾಗೂ ಸಮಯದ ಅಭಾವದಿಂದ ಎಲ್ಲ ಮತದಾರರನ್ನೂ ನೇರವಾಗಿ ಸಂಪರ್ಕಿಸಲು ಸಾದ್ಯವಾಗದ ಕಾರಣ, ಸೊಷಿಯಲ್ ಮೀಡಿಯಾ, ಕಾರ್ಯಕರ್ತರು, ಮತ್ತು ಸ್ನೇಹಿತರ ಮೂಲಕ ಮತದಾರರನ್ನು ಸಂಪರ್ಕಿಸಲಾಗುತ್ತಿದೆ. ನಾನು ಗೆದ್ದು ನಿರುದ್ಯೋಗಿ ಪದವೀಧರರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಗುಡ್ಡೇನಹಳ್ಳಿ ಪ್ರಸನ್ನ, ನಾಗೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಭೈರಪ್ಪ, ಸದಸ್ಯರುಗಳಾದ ಮಂಜುನಾಥ್, ನಂಜೇಗೌಡ, ಮುಖಂಡರುಗಳಾದ ನಂಜುಂಡಪ್ಪ, ದಾನಿಗೌಡ, ಜೋಗಿಪಾಳ್ಯ ಶಿವರಾಜ್,ಕೃಷ್ಣಮೂರ್ತಿ, ನಾಗರಾಜು, ಸ್ವರ್ಣಕುಮಾರ್, ಶ್ರೀಕಾಂತರಾಜ್ ಅರಸ್,ಇದ್ದರು.
